Friday, July 10, 2009

ಮಾತು...ಮುಗಿದ ಮೇಲೆ...


ಮಾತೆಲ್ಲಾ ಮುಗಿದ ಮೇಲೆ.. ಮನದೊಳಗೆ ಮೌನದ ಕೋಣೆ....

ಹೋದಲ್ಲೆಲ್ಲಾ ಮಾತು-ಕತೆ.. ಅದರಲ್ಲಿ ಹುರುಳೆಷ್ಟು..? ಪುಕ್ಕಟೆ ಎಷ್ಟು...? ಬಡಾಯಿ ಎಷ್ಟು...? ಮಾತಿಗಾಗಿ ಮಾತೆಷ್ಟು...? ಅಂತ ಒಂದು ಕ್ಷಣ ಯೋಚಿಸಿದರೆ, ಹುರುಳು ಎಷ್ಟು ಸಿಕ್ಕಾವು ಹೇಳಿ...? ಸುಮ್ಮನೆ ದಿನವಿಡೀ .. ಮಾತು.. ಮಾತು ... ಮಾತು... ಹಾಗೆ ಮಾತನಾಡುವಾಗ ನಾವು ಕೆಲವೊಮ್ಮೆ ನೇರವಾಗಿ[ ಕಣ್ಣಿಗೆ ಕೈ ಹಾಕಿದ ಹಾಗೆ] ಹೇಳಿ ಬಿಡುತ್ತೇವೆ... ಎದುರಿನಾತನಿಗೆ ಏನಾಗುತ್ತದೆ... ಅದರ ಪರಿಣಾಮ ಏನು ಎನ್ನವುದರ ಬಗ್ಗೆ ಆ ಕ್ಷಣ ಯೋಚಿಸುವುದಿಲ್ಲ ಮಾತು ಮಾತಾಗಿ ಹೋಗುತ್ತದೆ.. ಪರಿಣಾಮ ನಂತರ.... ಆದರೆ ಅದು ತಪ್ಪಾಗಿದ್ದರೂ ಮತ್ತೆ ಉಳಿಯುವುದು ಸಮರ್ಥನೆಯೊಂದೇ ದಾರಿ.. ಹೀಗಾಗಿ ಅದೆಷ್ಟೂ ಸಂಬಂಧಗಳೂ ಕಡಿದುಹೋಗಿವೆ.

ಇದ್ಯಾಕೆ ನೆನಪಾಯಿತೀಗ.. ??

ಮೊನ್ನೆ ನಾವು ಸುದ್ದಿಯೊಂದನ್ನು ಮಾಡುವುದಕ್ಕಾಗಿ 3 ಜನ ಮಿತ್ರರು ಒಂದು ಪ್ರತಿಷ್ಠಿತ ಶಾಲೆಗೆ ಹೋಗಿದ್ದೆವು. ಅಲ್ಲಿನ ಪ್ರಮುಖ ಅಧ್ಯಾಪಕರೊಬ್ಬರು 2 ವಾರದಿಂದ ದೂರವಾಣಿ ಮೂಲಕ ಹೇಳುತ್ತಲೇ ಇದ್ದರು. ಹಾಗಾಗಿ ಬಿಡುವು ಮಾಡಿ ಅಲ್ಲಿಗೆ ತೆರಳಿದ್ದಾಯಿತು. ಮೊದಲು ಹೋದವರೇ ಪ್ರಾಂಶುಪಾಲರ ಕೊಠಡಿಗೆ ಹೋಗಿ ಮಾತನಾಡಲು ಆರಂಭಿಸಿದೆವು. ಅಲ್ಲಿನ ವಿಚಾರ “ಲೋಕ”ದ ವಿಚಾರವೂ ಮಾತಿನ ನಡುವೆ ಬಂತು. ಆಗ ಅಲ್ಲಿಗೆ ನಮಗೆ ದೂರವಾಣಿ ಮೂಲಕ ಸುದ್ದಿ ಹೇಳಿದ ಅಧ್ಯಾಪಕರೂ ಬಂದರು. ನಮ್ಮ ಪರಿಚಯವನ್ನೂ ನಾವು ಹೇಳಿದೆವು. ಅವರು ಮತ್ತೆ ನನ್ನಲ್ಲಿ ಕೇಳಿದರು.... ನಿಮ್ಗೆ ಈ ವಿಷ್ಯ ಹೇಗೆ ಗೊತ್ತಯ್ತಾ ಅಂತ.. ನಾನಂದೆ ನೀವೇ 2 ವಾರದಿಂದ ಫೋನು ಮಾಡ್ತಿದ್ದೀರಲ್ಲಾ ಅಂತ.. ಆಗ ಅವರಂದ್ರು .. ನಿಮ್ಗೆ ಫೋನು ಮಾಡಿಲ್ಲ .. ನಾನು ಇವರಿಗೆ [ ನನ್ನೊಂದಿಗೆ ಬಂದ ನನ್ನ ಮಿತ್ರ] ಮಾತ್ರಾ ಫೋನು ಮಾಡಿದ್ದು ಎಂದು ಹೇಳಿದ್ರು. ಆಗ ನಂಗಂತೂ ಒಮ್ಮೆ ಶಾಕ.. ಮೌನ... ಮತ್ತೆ ಸಡನ್ ಆಗಿ ಕೇಳಿದೆ.. “ ಹಾಗಿದ್ರೆ ನಾನು ಬಂದಿದ್ದು ತಪ್ಪಾಯ್ತು ಅಂತೀರಾ” ಅಂತ ಹೇಳಿ ಬಿಟ್ಟೆ.. ಮತ್ತೆ ಒಮ್ಮೆ ಮೌನ.. ಕೂಡಲೇ ಪ್ರಾಂಶುಪಾಲರು ಹೇಳಿದ್ರು ಅಲ್ಲ ನಿಮ್ಗೆ ಹೇಗೆ ಗೊತ್ತಾಯ್ತು ಅಂತ ಕ್ಯೂರಿಯಾಸಿಟಿ ಅಂತ..... ಸರಿ ಸಂತ ನಾವು ಸುದ್ದಿಯತ್ತ ಹೋದೆವು.. ಆ ವಿಷಯ ಅಲ್ಲಿಗೇ ಬಿಟ್ಟು.. ಆದ್ರೆ ಮತ್ತೆ ಆ ಅಧ್ಯಾಪರು ಹೇಳಿದ್ರು .. ಅಲ್ಲ ನಿಮ್ಗೆ ಆಗ ನಾನು ಹಾಗೆ ಹೇಳಿದ್ದು ಬೇಸರ ಆಯ್ತಾ ಅಂತ ಕೇಳಿದ್ರು.. ಇಲ್ಲ ಇಲ್ಲ ಅಂತ ನಾನು ಆಗಲೇ ಆ ವಿಷಯ ಬಿಟ್ಟಾಯ್ತು ಅಂತ ಹೇಳಿದೆ.......

ಇದೊಂದು ಚಿಕ್ಕ ಘಟನೆ...

ಆದ್ರೆ ನಂಗೆ ಮತ್ತೆ .. ಮತ್ತೆ ಆ ವಿಷಯ ದಿನವಿಡೀ ಕಾಡುತ್ತಲೇ ಇತ್ತ... ನಾನು ಹಾಗೆ ಅಲ್ಲಿ ಹೇಳಿದ್ದು ಸರಿಯಾ .. ತಪ್ಪಾ... ನನ್ನನ್ನು ನಾನು ಸಮರ್ಥಿಸಿಕೊಳ್ಳುವುದು ಇದ್ದದ್ದೇ ... ಹಾಗಾಗಿ ಆ ಬಗ್ಗೆ 3 ನೇ ವ್ಯಕ್ತಿಯಾಗಿ ಚರ್ಚಿಸಿದೆ.. ಮಿತ್ರರೊಂದಿಗೆ ಆ ಬಗ್ಗೆ ಮಾತಾಡಿದೆ... 2 ರೀತಿಯ ಅಭಿಪ್ರಾಯ ಬಂತು.... ಆದರೂ ನನಗೆ ಸಮಾಧಾನ ತಾರದ ವಿಷಯ ಅದಾಯಿತು.

ಆ ಬಳಿಕ ಆದರೆ ನಂಗನಿಸಿತು .. ನನ್ನೊಳಗೆ ಅದೆಲ್ಲೋ ಅಹಂ ಆಗ ಕುಳಿತಿತ್ತಾ..?? ನಿಜಕ್ಕೂ ಅಧ್ಯಾಪಕ ಹೇಳಿದ ರೀತಿ ಯಾವುದು ಎಂಬುದರ ಬಗ್ಗೆ ನಾನು ಯಾಚಿಸದೆ ಆ ಕ್ಷಣದ ನನ್ನ ಪ್ರತಿಕ್ರಿಯಿಂದ ಅವರಿಗೂ ನೋವಾಗಿದೆ. ಅಂತ ನನಗೆ ಅನಿಸಿತು.. ನನಗೂ ಅವರ ಮಾತು ಆ ಕ್ಷಣಕ್ಕ ನೋವು ತಂದದ್ದೂ ಅಷ್ಟೇ ಸತ್ಯ. ಯಾಕೆಂದರೆ ನಾನು ಕೆಲಸ ಮಾಡುವ ಸಂಸ್ಥೆ ನನಗೆ ದೊಡ್ಡದೇ.... ಹಾಗಾಗಿ ಮತ್ತೊಮ್ಮೆ ನನ್ನೊಳಗೆ ನಾನು ಸಮರ್ಥಿಸಿಕೊಂಡೆ...

ಆದರೆ ಅನೇಕ ಸಲ ನನಗೆ ಅನಿಸಿದ್ದಿದೆ.. ಅದೆಲ್ಲೋ ಅಹಂ ಎನ್ನುವುದು ನನ್ನೊಳಗೆ ಸೇರಿಕೊಂಡಿದೆಯಾ..? ಹಾಗಾಗಿ ನನ್ನೊಳಗಿನಿಂದ ಕೆಲ ಮಾತುಗಳು ಹಾಗೆ ಹೇಳಿಸಿದೆಯಾ..? ಇಲ್ಲ ಹಾಗಾಗದಂತೆ ಎಚ್ಚರಿಕೆ ವಹಿಸಬೇಕು...

ಏಕೆಂದರೆ ಮಾತು ಅನ್ನುವುದು ಆಡಿದರೆ ಮುಗಿಯಿತು... ಅದು ದಾಖಲಾಗಿ ಬಿಡುತ್ತದೆ... ಮತ್ತೆ ಹಿಂದೆ ಸರಿಯಬಾರದು.... ಸರಿಯಲೂ ಆಗದು... ಅದು ನೇರವಾಗಿ ಇರಬೇಕು... ಮಾತಿಗೆ ಇಷ್ಟವಿಲ್ಲದಿದ್ದೆ ಮೌನವೇ ಉತ್ತರವಾಗಬೇಕು... ಹಾಗಾಗಿಯೇ ಅಂದು ನಾನು ಮೌನಿಯಾದ್ದು....

ಹಾಗಾಗಿ... ಮಾತು ಮುತ್ತು .. ಮೌನ ಬಂಗಾರ....!!!

Monday, July 6, 2009

ಇಲ್ಲಿ ಡಿಗ್ರಿ ಓದಿದವರು ಇಬ್ಬರೇ....!!




ಒಂದು ಕಡೆ ನಾಗಾಲೋಟದಿಂದ ಓಡುವ ನಗರಗಳು.ಇನ್ನೊಂದು ಕಡೆ ಅಭಿವೃದ್ದಿಯ ಹೆಸರಿನಲ್ಲಿ ಬದಲಾವಣೆಯನ್ನು ಕಾಣುವ ಸಮಾಜ.ಇದೆಲ್ಲದರ ಭ್ರಮೆಯಲ್ಲಿ ಇಡೀ ಜಗತ್ತು ಬದಲಾಗಿದೆ ಎನ್ನುವ ತಲೆಭಾರ... ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ.?.

ಅದರಾಚೆಗೆ ಬಂದು ನೋಡಿದಾಗಲೂ ಕಾಣುವುದು ಅದೇ ಬದಲಾವಣೆ..ಅದೇ ಅಭಿವೃದ್ದಿಯ ಮಂತ್ರ.

ಇತ್ತೀಚೆಗೆ ಹಿರಿಯ ಅಧಿಕಾರಿಗಳೊಬ್ಬರ ಜೊತೆ ಮಾತನಾಡುತ್ತಿದ್ದಾಗ ಇದೇ ಅಭಿವೃದ್ದಿಯ ಅದರಲ್ಲೂ ನಗರದ ಸುಂದರ ಕಲ್ಪನೆ ಮತ್ತು ಅದರ ಬದಲಾವಣೆಯ ಬಗ್ಗೆ ಕೇಳುತ್ತಿದ್ದಾಗ ಅವರು ಇನ್ನೊಂದು ಮಗ್ಗುಲಲ್ಲಿ ಅದನ್ನು ಯೋಚಿಸುವ ದಾರಿ ತೋರಿಸಿದರು.ನಂತರ ಅವರು ವಿವರಿಸಿದರು ನಗರವೊಂದರ ರಸ್ತೆ ಅಗಲೀಕರಣ ಉದಾಹರಣೆಯನ್ನು ಕೊಡುತ್ತಾ ನಗರದ ರಸ್ತೆ ಅಗಲೀಕರಣದಿಂದಾಗಿ ಸಲ್ಲಿರುವ ಹತ್ತಾರು ಗೂಡಂಗಡಿಗಳು ಮಾಯವಾಗುತ್ತದೆ. ರಸ್ತೆ ಅಗಲವಾತ್ತದೆ. ಪಾರ್ಕಿಂಗ್‌ಗೆ ಜಾಗವಾಗುತ್ತದೆ. ವಾಹನಗಳ ಸುಲಭ ಸಂಚಾರವಾಗುತ್ತದೆ. ಇದರಿಂದಾಗಿ ಸಾಮಾನ್ಯ ಜನರಿಗೆ, ಹಳ್ಳಿ ಜನರಿಗೆ ಏನು ಪ್ರಯೋಜನ..?. ಅಲ್ಲಿ ಮತ್ತೆ ದುಪ್ಪಟ್ಟು ವ್ಯಾಪಾರವಾಗುವುದು ಅದೇ ಶ್ರೀಮಂತ ವ್ಯಾಪಾರಿಗೆ. ಬಡ ಗೂಡಂಗಡಿ ವ್ಯಾಪಾರಿಗೆ ಏನು ಗತಿ..? ಹಾಗೆಂದು ರಸ್ತೆ ಅಗಲೀಕರಣವಾಗಲಿ, ನಗರ ಅಭಿವೃದ್ದಿ ಆಗಬಾರದು ಎನ್ನುವ ಧೋರಣೆ ಇದಲ್ಲ. ನಿಜಕ್ಕೂ ನಗರದ ಅಭಿವೃದ್ದಿ ಇಂದು ಅಗತ್ಯಕ್ಕಿಂತ ಹೆಚ್ಚಾಗಿ ನಡೆದರೆ ಅದೇ ಒಂದು ಹಳ್ಳಿಯ , ಒಂದು ಗ್ರಾಮದ ಅಭಿವೃದ್ದಿ ಅದೇ ವೇಗದಲ್ಲಿ ನಡೆಯುತ್ತಿಲ್ಲ. ಆದರೂ ನಾವು ಅದೇ ನಗರದ ಅಭಿವೃದ್ದಿ ನೋಡಿ ಭಾರತ ಅಭಿವೃದ್ದಿಯ ಪಥದಲ್ಲಿದೆ ಅಂತ ಕರೀತೇವೆ. ಆದರೆ ನಿಜಕ್ಕೂ ಪರಿಸ್ಥಿತಿ ಹಾಗಿದೆಯಾ..?

ಅದಕ್ಕೆ ಒಂದು ಹಳ್ಳಿಯ ಕಡೆಗೆ ಹೋಗ ಬೇಕು. ಆಗ ಅಲ್ಲಿನ ಸತ್ಯ ದರ್ಶನವಾಗುತ್ತದೆ. ಇಂದಿಗೂ ಅದೆಷ್ಟೂ ಹಳ್ಳಿಗಳು ಬೆಳಕನ್ನೇ ಕಂಡಿಲ್ಲ.ಅಂತಹ ಹಳ್ಳಿಯೊಂದರ ಕತೆ ಇಲ್ಲಿದೆ.

ಅದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗಡಿಭಾಗದಲ್ಲಿರುವ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮ.ಪುತ್ತೂರಿನಿಂದ ಸರಿಸುಮಾರು 60 ರಿಂದ 70 ಕಿಲೋ ಮೀಟರ್ ದೂರದಲ್ಲಿದೆ. ಹಾಗೆ ನೋಡಿದರೆ ಈ ಗ್ರಾಮಗಳು ಸೌಲಭ್ಯಗಳಿಂದಲೂ ದೂರವೇ ಇದೆ. ಈ ಗ್ರಾಮದಲ್ಲಿನ ಬಾರ್ಯ, ಬೊಟ್ಟಡ್ಕ ಪ್ರದೇಶದಲ್ಲಿ 30 ಮನೆಗಳಿವೆ. ಇವರಿಗೆ ಅಭಿವೃದ್ದಿ ಎಂಬುದು ಮರೀಚಿಕಯೇ ಸರಿ.ಸ್ವಾತಂತ್ರ್ಯ ಬಂದು ೬ ದಶಕಗಳೇ ಕಳೆದರೂ ಈ ಭಾಗ ಇನ್ನೂ ಬೆಳಕು ಕಂಡಿಲ್ಲ. ಅದು ಮಾತ್ರವಲ್ಲ ವ್ಯವಸ್ಥಿತವದ ರಸ್ತೆ ಸಂಪರ್ಕ, ಸೇತುವೆಗಳೂ ಈ ಗ್ರಾಮಕ್ಕಿಲ್ಲ.ಇಲ್ಲಿನ ಜನರ ಬದುಕೇ ಒಂದು ಸರ್ಕಸ್.ಇವರು ಅರ್ಜೆಂಟಾಗಿ ಪೇಟೆಗೆ ಹೋಗಬೇಕು ಅಂದ್ರೆ ಇಲ್ಲಿನ ಜನ ಐದಾರು ಕಿಲೋಮೀಟರ್‌ಗಳಷ್ಟು ದೂರ ನಡೆದೇ ಸಾಗಬೇಕು. ಮೊಬೈಲ್ ಸಂಪರ್ಕವಂತೂ ಇಲ್ವೇ ಇಲ್ಲ.ದೂರವಾಣಿಯೂ ಇಲ್ಲಿಗೆ ದೂರವಾಗಿದೆ. ಅದು ಬಿಡಿ ಮಳೆಗಾಲವಂತೂ ಇವರ ಬದುಕು ದ್ವೀಪದಂತಾಗುತ್ತದೆ. ಬಾರ್ಯವನ್ನು ಸಂಪರ್ಕಿಸುವ ನಿಡ್ಯಮೇರು ಎಂಬ ಹೊಳೆ ತುಂಬಿ ಹರಿಯುವ ಕಾರಣದಿಂದ ಇರುವ ರಸ್ತೆ ಸಂಪರ್ಕವೇ ಕಡಿದುಹೋಗುತ್ತದೆ. ಆಗ ತಾತ್ಕಾಲಿಕವಾಗಿ ನಿರ್ಮಿಸಿದ ಕಾಲುಸಂಕದಲ್ಲಿ “ಸರ್ಕಸ್” ಮಾಡಿ ಅನಿವಾರ್ಯವಾಗಿ ಸಾಗಬೇಕು. ಹೀಗಾಗಿ ಹೊರ ಜಗತ್ತಿನ ಸಂಪರ್ಕವೇ ಅವರಿಗಿಲ್ಲ.ಇನ್ನು ಜೀಪು ಹೊರತು ಪಡಿಸಿ ಬೇರಾವ ವಾಹನಗಳು ಇಲ್ಲಿ ಓಡಾಡಲ್ಲ. ಹಾಗಾಗಿ ಜೀಪಿನ ಹೊರತಾಗಿ ಬೇರೆ ವಾಹನದ ಪ್ರಯಾಣ ಇಲ್ಲಿ ಇವರಿಗೆ ಕನಸೇ ಸರಿ.ಅದು ಬಿಡಿ ನಗರದಲ್ಲಿರುವಂತೆ ಮನೆಗೆರಡರಂತೆ ಇಲ್ಲಿ ವಾಹನವೇ ಇಲ್ಲ.ಈ ಬಾಗದಲ್ಲಿ ಸ್ವಂತ ವಾಹನ ಇರುವವರೇ ಇಲ್ಲ. ಎಲ್ಲರಿಗೂ ಕಾಲುಗಳೇ ಆಧಾರ.ಅಲ್ಲಿಂದ ನಂತರ ಗ್ರಾಮಕ್ಕೆ ಬರುವ ಒಂದೆರಡು ಸರಕಾರಿ ಬಸ್ಸು....!!. ಇನ್ನು ಇಲ್ಲಿನ 30 ಮನೆಗಳಲ್ಲಿ ಪದವಿ ಶಿಕ್ಷಣ ಪಡೆದವರು ಕೇವಲ ಇಬ್ಬರು. .4ಮಂದಿ ಪಿಯುಸಿ ಶಿಕ್ಷಣ ಪಡೆದರೆ ಇನ್ನು ಬಹುತೇಕರು ಎಸ್.ಎಸ್.ಎಲ್.ಸಿಯಲ್ಲಿ ಶಾಲೆ ಬಿಡಬೇಕಾದ ಸಂದರ್ಭವೇ ಹೆಚ್ಚು.


ಬೌಗೋಳಿಕವಾಗಿ ನೋಡಿದರೆ ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮವು ಒಟ್ಟು 17,118 ವಿಸ್ತೀರ್ಣವಿದೆ.ಇದರಲ್ಲಿ ಬಹುಪಾಲು ಅರಣ್ಯ ಪ್ರದೇಶ. ಹಾಗಾಗಿ ಈ ಗ್ರಾಮ ವಿಸ್ತಾರವಾಗಿದ್ದರೂ ಗ್ರಾಮ ಪಂಚಾಯತ್‌ಗೆ ಆದಾಯ ಕಡಿಮೆಯೇ. ಹಾಗೆಂದು ಸರಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆಯನ್ನು ವಿವರಿಸಿದರೆ ಅರ್ಥವೂ ಆಗುತ್ತಿಲ್ಲ. ಇದುವರೆಗೆ ಒಬ್ಬ ಜನಪ್ರತಿನಿಧಿ ಮಾತ್ರಾ ಈ ಭಾಗಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಿದ್ದು ಬಿಟ್ಟರೆ ಬೇರಾವ ಜನನಾಯಕರೂ ಇತ್ತ ಬೇಟಿ ಕೊಟ್ಟಿಲ್ಲ. ಅಧಿಕಾರಿಗಳಂತೂ ತಲೆಹಾಕಿಲ್ಲ. ಅಭಿವೃದ್ದಿಯ ಕೆಲಸವೂ ಆಗಿಲ್ಲ. ಗ್ರಾಮ ಪಂಚಾಯತ್ ಕೂಡಾ ಇಲ್ಲಿನ ಅಭಿವೃದ್ದಿಯ ಬಗ್ಗೆ ಯೋಚಿಸುತ್ತದೆ ಆದರೆ ಶಕ್ತಿ ಇಲ್ಲದೆ ದಿಕ್ಕೆಟ್ಟು ಕೂತಿದೆ.


ಒಟ್ಟಿನಲ್ಲಿ ಹಳ್ಳಿಯೊಂದರ ಕತೆ ಹೀಗಿರುವಾಗ ಅಭಿವೃದ್ದಿಯ ಮಂತ್ರ ಪಠಿಸುವ ಜನನಾಯಕರಿಗೆ ಇದೆಲ್ಲವೂ ಅರ್ಥವಾಗುತ್ತಿಲ್ಲವೇ ಅಥವಾ ಅಭಿವೃದ್ದಿಯ ನಾಟಕವಾಡುತ್ತಿದ್ದಾರೆಯೇ ಎಂದು ಸಂಶಯ ಹುಟ್ಟಿಸುತ್ತದೆ.ಗ್ರಾಮೀಣ ಭಾಗದ ಅದೆಷ್ಟೂ ಹಳ್ಳಿಗಳು ಇಂದು ಇದೇ ರೀತಿಯಾಗಿ ಮೂಲಭೂತ ಸೌಲಭ್ಯದಿಂದ ವಂಚಿತವಾಗಿವೆ.ಕೆಲವು ಕಡೆ ಸರಿಯಾದ ಬಸ್ಸುಗಳ ವ್ಯವಸ್ಥೆಯಿಲ್ಲ. ಶಾಲಾ ಮಕ್ಕಳು ಸಂಜೆ ಮನೆಗೆ ತಲಪುವಾಗ ದೀಪ ಉರಿಸುವ ಹೊತ್ತಾಗಿರುತ್ತದೆ. ಮರಿದಿನ ಬೆಳಗ್ಗೆ ಮತ್ತೆ ದೀಪ ಆರುವ ಮುನ್ನವೇ ಮನೆಯಿಂದ ಹೊರಬೀಳಬೇಕು ಇಲ್ಲವಾದ್ರೆ ಶಿಕ್ಷಣವೂ ಇಲ್ಲದೆ ಕತ್ತಲಲ್ಲಿರಬೇಕಾಗುತ್ತದೆ. ಎಂತಹ ಅಜಗಜಾಂತರ ...!!. ಒಂದೆಡೆ ಮನೆಬಾಗಿಲಿಗೆ ಮಕ್ಕಳನ್ನು ತಂದು ಬಿಡುವ ಶಿಕ್ಷಣ ಇನ್ನೊಂದು ಕಡೆ ಶಾಲೆಯ ಬಾಗಿಲನ್ನು ಅರಸಿಕೊಂಡು ಹೋಗುವ ಶಿಕ್ಷಣ. ಇಂತಹ ಸಂದಿಗ್ದ ಪರಿಸ್ಥಿತಿ ಇಲ್ಲಿದೆ. ಆದರೂ ಭಾರತ ಶ್ರೀಮಂತ ದೇಶ. ಸುಖೀ ದೇಶ.ನೆಮ್ಮದಿ ಇಲ್ಲಿದೆ.ಏಕೆಂದರೆ ಇದ್ದುದರಲ್ಲೇ ಸಂತೋಷ ಪಡುವ ಸಮಾಜ ನಮ್ಮದು. ಇರುವ ಸಮಸ್ಯೆಯನ್ನು ಹಾಗೆಯೇ ಸ್ವೀಕರಿಸುವ ಗುಣ ನಮ್ಮದು. ಹಾಗಾಗಿ ಸಮಸ್ಯೆಗಳು ಹಾಗೆಯೇ ಉಳಿದುಕೊಂಡು ಬಿಡುತ್ತದೆ. ಅದುವೇ ಒಂದು ಅಭ್ಯಾಸವಾಗಿಬಿಡುತ್ತದೆ.

Tuesday, June 23, 2009

ಸಿಡಿಲಿನ ಮಾಯೆ.. .



ಒಂದು ಪ್ರದೇಶಕ್ಕೆ ಒಂದೆರಡು ಬಾರಿ ಸಿಡಿಲು ಬೀಳುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಪ್ರದೇಶದಲ್ಲಿ ಕಳೆದ 10 ವರ್ಷಗಳಿಂದ ನಿರಂತರವಾಗಿ ಸಿಡಿಲು ಬೀಳುತ್ತಲೇ ಇದೆ.ಈಗಾಗಲೇ ಈ ಕೃಷಿ ಭೂಮಿಯಲ್ಲಿ 20 ಕ್ಕೂ ಅಧಿಕ ತೆಂಗಿನ ಮರಗಳು ಸಾವನ್ನಿಪ್ಪಿವೆ. ಮಾತ್ರವಲ್ಲ ಕಳೆದ ವರ್ಷ ಇಲ್ಲೇ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ ಕೂಡಾ. ಹಾಗಾದ್ರೆ ಇದೇ ಪ್ರದೇಶದಲ್ಲಿ ಏಕೆ ಸಿಡಿಲು ಬೀಳುತ್ತಿದೆ ಎನ್ನುವ ಕುತೂಹಲ ಇಲ್ಲಿನ ಗ್ರಾಮಸ್ಥರಲ್ಲಿದೆ.

ಕಳೆದ 10 ವರ್ಷಗಳಿಂದ ಒಂದೇ ಪ್ರದೇಶಕ್ಕೆ ಸಿಡಿಲು ಬೀಳುತ್ತಲೇ ಇದೆ ಕಾರಣವೇನು ಎಂಬ ಕುತೂಹಲದ ಪ್ರಶ್ನೆ ಇದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ಮೂಡಿಬಂದಿರುವ ಪ್ರಶ್ನೆ ಇದು.ಇಲ್ಲಿನ ಉಳಿಯಬೈಲಿನ ಅಜಿತ್ ಕುಮಾರ್ ಎಂಬವರಿಗೆ ಸೇರಿದ ಗದ್ದೆ ಹಾಗೂ ಅಡಿಕೆ ತೋಟದ ಪ್ರದೇಶದಲ್ಲಿ ನಿರಂತರವಾಗಿ ಸಿಡಿಲು ಬಡಿಯುತ್ತಿದೆ. ಹೀಗೆ ಸಿಡಿಲು ಬಡಿದ ಪರಿಣಾಮವಾಗಿ ವರ್ಷ ಕನಿಷ್ಠ ಒಂದು ತೆಂಗಿನಮರ ಸಾಯುತ್ತಿದೆ.ಇದುವರೆಗೆ 20 ಕ್ಕೂ ಅಧಿಕ ತೆಂಗಿನ ಮರ ಸತ್ತಿದೆ.ಹೀಗೆ ಸಿಡಿಲು ಬಡಿಯಲು ಕಾರಣವೇನು ಎಂಬ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.

ಕೆಲವರು ಈ ಪ್ರದೇಶದಲ್ಲಿ ಖನಿಜಾಂಶ ಇರಬಹುದು ಎಂದರೆ ಇನ್ನೂ ಕೆಲವರು ಇಲ್ಲಿ ನೀರಿನ ಓಳಹರಿವು ಹೆಚ್ಚಿರಬೇಕು ಎನ್ನುತ್ತಾರೆ.

ಕಳೆದ ವರ್ಷ ಇದೇ ಪ್ರದೇಶದಲ್ಲಿ ಜೊತೆಯಾಗಿ 5 ಜನ ಕೆಲಸ ಮಾಡುತ್ತಿರುವಾಗ ಜೋರಾಗಿ ಗುಡುಗು , ಸಿಡಿಲು, ಮಳೆ ಬಂದಾಗ ಆಶ್ರಯಕ್ಕಾಗಿ ಸಮೀಪದ ತೆಂಗಿನ ಮರದ ಬುಡದಲ್ಲಿ ನಿಂತಿರುವಾಗ ಹಠಾತ್ ಆಗಿ ಸಿಡಿಲು ಬಡಿದು 2 ಜನ ಮೃತ ಪಟ್ಟರೆ ಇತರ ೩ ಜನರಿಗೆ ಗಾಯವಾಗಿತ್ತು.

ಒಟ್ಟಿನಲ್ಲಿ ಇದೊಂದು ಕೌತುಕವೋ ಅಥವಾ ಪ್ರಕೃತಿಯ ಮುನಿಸೋ ಅಥವಾ ಖನಿಜಾಂಶದ ಪರಿಣಾವೋ ಎಂಬುದು ಇನ್ನಷ್ಠೇ ಪತ್ತೆಯಾಗಬೇಕಿದೆ.ಅದುವರೆಗೆ ಈ ತೋಟದ ಮಾಲಿಕರಿಗೆ ಪ್ರತೀ ವರ್ಷದ ಮಳೆಗಾಲವೆಂದರೆ ಆತಂಕವೇ ಆಗಿದೆ.

Saturday, June 13, 2009

ಇಲ್ಲಿ ಕಣ್ಣೀರು ಬತ್ತಿ ಹೋಗಿದೆ..



ಆ ತಾಯಿಯ ಕಣ್ಣೀರು ಬತ್ತಿ ಹೋಗಿತ್ತು.. ಮುಖದಲ್ಲಿ ಒಣ ನಗು.. ಹೃದಯದಲ್ಲಿ ಭಾರವಾದ ನೋವು... ಆದರೂ ಬದುಕು ಅನಿವಾರ್ಯ ಏಕೆಂದರೆ ಆ ಮಕ್ಕಳು ಇದ್ದಾರಲ್ಲ... ಇದು ಕತೆಯಲ್ಲ ನಿಜ ಜೀವನದ ಒಂದು ತುಣುಕು ಅಷ್ಟೇ.. ನಿಜಕ್ಕೂ ಭಯಾನಕವೆನಿಸುತ್ತದೆ... ಮನಸ್ಸು ಕರಗಿಹೋಗುತ್ತದೆ... ಆ ಎಲ್ಲಾ ಘಟನೆಗಳನ್ನು ಕೇಳುತ್ತಾ ಮನಸ್ಸಿಗಾದ ಅನುಭವವನ್ನು ಇಲ್ಲಿ ದಾಖಲಿಸಬೇಕು ಎಂದೆನಿಸಿತು....

ಪೂರ್ವ ನಿಗದಿಯಂತೆ ಇಂದು ಮುಂಜಾನೆ ಕೊಕ್ಕಡ ಬಳಿಯ ಪಡ್ರಮೆ ಕಡೆಗೆ ಹೋಗುವುದಕ್ಕಿತ್ತು. ಆಗಲೇ ಅಲ್ಲಿ ಎಂಡೋಸಲ್ಫಾನ್ ಇಲ್ಲಿಯ ಗೇರು ತೋಟಕ್ಕೆ ಕಳೆದ ೨೦ ವರ್ಷ ಹಿಂದೆ ಸಿಂಪಡಿಸಿದ್ದರ ಪರಿಣಾಮವನ್ನು ಇಂದು ಅಲ್ಲಿಯ ಜನ ಅನುಭವಿಸುತ್ತಿರುವುದರ ಬಗ್ಗೆ ಸ್ಥಳಿಯರು ಹಾಗೂ ಅಲ್ಲಿನ ಮಿತ್ರರು ಹೇಳಿದ್ದರು. ಹಾಗಾಗಿ ಆ ಬಗ್ಗೆ ಕುತೂಹಲವಿತ್ತು. ಈ ಮೊದಲು ಚಿತ್ರದಲ್ಲಿ ಅಂತಹವುಗಳನ್ನು ಓದಿದ್ದೆನೇ ಹೊರತು ನೋಡಿರಲಿಲ್ಲ.

ನಾವು ಮೊದಲಿಗೆ ಹೋದದ್ದು ಒಂದು ಶಾಲೆಗೆ.. ಅಲ್ಲಿ ಮಕ್ಕಳು ಕುಣಿದು ಕುಪ್ಪಳಿಸಬೇಕಾಗಿತ್ತು. ಆಧರೆ ಕೆಲವರಿಗೆ ಬುದ್ದಿ ಭ್ರಮಣೆ.. ಇನ್ನೂ ಕೆಲವರಿಗೆ ಗಂಭಿರತೆ ಇಲ್ಲ... ಮುಂದೆ ಸಾಗಿತು ನಮ್ಮ ತಂಡ.. ಅಲ್ಲಿನ ಪರಿಸ್ಥಿತಿ ಕಂಡಾಗ ಮನಸ್ಸು ಕರಗಿತು.. ಆತ ೨೧ ವರ್ಷದ ಹುಡುಗ... ಏಳಲಾಗದು.... ಕೂರಲಾಗದು... ಅದೂ ಬಿಡಿ ಅತ್ಯಂತ ವಿಕಾರವಾಗಿ ಮಲಗಿಕೊಂಡಿರುವ ಸ್ಥಿತಿ... ಆತನ ತಾಯಿಯಿಂದಲೇ ಎಲ್ಲಾ ಆರೈಕೆ.. ಸರಿಯಾಗಿ ನೋಡಿದರೆ ಮನೆಯವರ ಜವಾಬ್ದಾರಿಯನ್ನು ಹೊರಬೇಕಾದ ಪ್ರಾಯ.... ಇನ್ನೂ ಮುಂದೆ ಹೋದಾಗ ಅದು ಇನ್ನೂ ಭೀಕರ ಅಲ್ಲಿ ಮಾನಸಿಕ ಅಸ್ವಸ್ಥರಾದ ಮನೆ ಮಂದಿ... ಏನೇನೋ ಕತೆ.. ಅಲ್ಲಿಂದಲೂ ಮುಂದೆ ಹೋದಾಗ.... ಕರುಳು ಹಿಂಡುವ ದೃಶ್ಯ.. ಅದಿನ್ನೂ ಒಂದೂವರೆ ವರ್ಷದ ಬಾಲೆ.. ಅದರ ಬೆಳವಣಿಗೆ ಕುಂಠಿತ.. ಪಾಪ ಆ ಮುಗ್ದ ಬಾಲೆ ಈ ಲೋಕಕ್ಕೆ ಏನು ಅನ್ಯಾಯ ಮಾಡಿತ್ತು...? ಸರಿ ಅಲ್ಲಿಂದಲೂ ಮುಂದೆ ಹೋದಾಗ ವಿಕಾರವಾಗಿ ನಗುವ ಮುಖ ... ಮಲಗಿದಲ್ಲಿಂದ ಏಳಲಾಗದ ಸ್ಥಿತಿ... ಅಬ್ಬಾ ಇದಿಷ್ಟು ನೋಡಿದಾಗಲೇ ಸಾಕೆನಿಸಿತು.. ಆದರೆ ಇನ್ನೂ ಆ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಇಂತಹ ವಿವಿದ ಕಾಯಿಲೆಗಳಿಂದ ಇದ್ದರು.. ಆದರೆ ಮನಸ್ಸು ಆಗಲೇ ಸಂಪೂರ್ಣ ಕರಗಿಹೋಯಿತು....

ನನ್ನೊಂದಿಗೆ ಹೋರಾಟಗಾರರಿದ್ದರು.. ಅವರು ಹೇಳಿದ ಮಾತು ಕೇಳಿ ನಾನು ಮೂಕನಾದೆ.... ನಮ್ಮ ಸಾಧನೆಯೇನೂ ಇಲ್ಲ ಎನಿಸಿತು.. ಮಾತ್ರವಲ್ಲ ಮಾಧ್ಯಮಗಳು ಇಂದು ಪ್ರಭಾವ ಶಾಲಿಯಲ್ಲವೇ ಎಂದು ಮನದೊಳಗೆ ಪ್ರಶ್ನೆ ಮೂಡಿತು..

ಇವರ ಕತೆ ಕೇಳಿ.. ಈ ವ್ಯಕ್ತಿ ಇಲ್ಲಿನ ಸ್ಥಿತಿಯನ್ನು ಸಂಪೂರ್ಣ ಚಿತ್ರೀಕರಿಸಿ ಮಂತ್ರಿಗಳಿಗೆ ತೋರಿಸಲು ರಾಜಧಾನಿಗೆ ಹೋಗಿದ್ದರಂತೆ.. ಆದರೆ ಅಲ್ಲಾದ ಅನುಭವ ಅವರಲ್ಲಿದ್ದ ಎಲ್ಲಾ ಆಸೆಗಳಿಗೆ ತಣ್ಣೀರು ಬಿತ್ತಂತೆ.. ಹಾಗೆ ಪತ್ರಿಕಾಗೋಷ್ಠಿ ಮಾಡೋಣ ಎಂದರೆ ಅವರ ಕಿಸೆಯಲ್ಲಿದ್ದುದು ಕೇವಲ ಒಂದುಸಾವಿರವಂತೆ.. ಹಾಗಿದ್ದರೂ ಅವರು ಮತ್ತೆ ಊರಿಗೆ ಬಂದು ಹೋರಾಟ ಆರಂಭಿಸಿದರು. ಸ್ವತ: ಈ ವ್ಯಕ್ತಿಯೇ ರೋಗ ಪೀಡಿತ.. ಒಂದು ಕಣ್ಣು ದೃಷ್ಠಿ ಕಳಕೊಂಡಿದೆ ಇನ್ನೊಂದು ಶೇಕಡಾ ೨೫ ಮಾತ್ರಾ ಕಾಣುತ್ತದೆ ಇದು ಯಾವಾಗ ಮಂದವಾಗುತ್ತದೆ ಅಂತ ಗೊತ್ತಿಲ್ಲ ಎನ್ನುವ ಈ ವ್ಯಕ್ತಿಗೆ ಇದರಿಂದ ಏನೂ ಪ್ರಯೋಜನವಿಲ್ಲ.ಈ ಹೋರಾಟ ಮಾಡುವುದರಿಂದ ಫಲ ಸಿಕ್ಕುತ್ತದೆ ಎನ್ನುವ ವಿಶ್ವಾಸ ಇಲ್ಲದಿದ್ದರೂ ಅವರ ಮನೆಯಲ್ಲಿರುವ ಅವರ ತಾಯಿ ಸುಮ್ಮನಿದ್ದರೆ ಕೇಳುತ್ತಾರಂತೆ .. ಇಂದು ಅವನಿಗೆ ಕಣ್ಣು ಕಾಣುವುದಿಲ್ಲ ಅಂತ.. ಹಾಗಾಗಿ ಮನೆಯವರ ಸಮಾಧಾನ ಮತ್ತು ಆತನ ಆತ್ಮ ತೃಪ್ತಿಗಾಗಿ ಈ ಹೋರಾಟ ಮಾಡುತ್ತಾರಂತೆ.. ಏಕೆಂದರೆ ಇಂದಿನ ಜನಪ್ರತಿನಿಧಿಗಳು ಈ ಸಮಾಜಕ್ಕೆ ನಾಲಾಯಕ್ಕು.. ನಾವು ಆರಿಸಿ ಕಳಿಸುತ್ತೇವಲ್ಲಾ ನಾವೇ ಮೂರ್ಖರು..

ಅಲ್ಲಿ ಶ್ರೀಮಂತ ದೇವರುಗಳಿಗೆ ಕೋಟಿ ಕೋಟಿ ಸುರಿಯುವ ನಾಯಕರು ಒಂದೆಡೆ.... ಇನ್ನೊಂದೆಡೆ ನಾಯಾಲಕ್ಕು ಎಂದು ಮಾಧ್ಯಮದ ಮಂದಿಗೆ ಬರೆಯುವ ಮಂತ್ರಿಗಳು ಇನ್ನೊಂದು ಕಡೆ . ಇಂತಹವರು ಒಮ್ಮೆಯಾದರೂ ಈ ಪ್ರದೇಶಕ್ಕ ಭೇಟಿ ನೀಡಿ ಕನಿಷ್ಠ ಸಾಂತ್ವಾನವನ್ನಾದರೂ ಹೇಳುವ ಸೌಜನ್ಯ ಇವರಲ್ಲಿದೆಯಾ..? ಕೇವಲ ಅಲ್ಲಿಕೂತು ಕುರ್ಚಿ ಕಾಯುವ ಕೆಲಸ ಮಾಡುವ ನಾಯಕರಿಂದ ಏನನ್ನು ಬಯಸಬಹುದು ಹೇಳಿ...? ಅದೇ ಕೆರಳದ ಸರಕಾರ ಎಲ್ಲಾ ಎಂಡೋಸಲ್ಫಾನ್ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿದೆ... ಆದರೆ ಇಲ್ಲಿ ನಮ್ಮ ನಾಯಕರ ಗಮನಕ್ಕೇ ಬಂದಿಲ್ಲ ಕೇಳಿದರೆ ಕೋಟಿ ಲೆಕ್ಕ... ಅತಿ ಶೀಘ್ರದಲ್ಲಿ ಪರಿಹಾರ.. ಎನ್ನುವ ಬೊಗಳೆ...
ಆದರೂ ಇಲ್ಲಿಯ ಜನ ಕಣ್ಣೀರು ಬತ್ತಿ ಹೋದರೂ ಬದುಕು ಸಾಗಿಸುತ್ತಿದ್ದಾರಲ್ಲಾ.. ಅದು ಗ್ರೇಟ್... ದೇವರಿದ್ದಾನೆ ಎಂದಾದರೆ ಅಂತಹವರಿಗೆ ಒಲಿಯಬೇಕು. ಅದು ಬಿಟ್ಟು ಶ್ರೀಮಂತರನ್ನು ಮಾತ್ರಾ ಕಾಯುವ ಕೆಲಸ ಮಾಡಬೇಡ ದೇವಾ....


Wednesday, June 10, 2009

ಇದು ಸುದ್ದಿಯಾಗಿಲ್ಲ....

ಇಂದು ಹುಡುಗರೆಲ್ಲಾ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಅಂತ ಬೊಬ್ಬಿಡುವ ನಾವು ನಿಜಕ್ಕೂ ಕೃಷಿ ಬಗೆಗಿನ ಒಳ್ಳೆಯ ವಿಚಾರಗಳಿಗೆ ಏಕೆ ಪ್ರಚಾರ ಕೊಡುತ್ತಿಲ್ಲ ಎನ್ನುವ ಸಂಗತಿಯೊಂದು ಮೊನ್ನೆ ತಲೆಯಲ್ಲಿ ತಿರುಗಾಡುತ್ತಿತ್ತು. ಪ್ರತೀ ದಿನ ಭಾಷಣದಲ್ಲಿ , ಪತ್ರಿಕೆಗಳಲ್ಲಿ , ಮಾಧ್ಯಮಗಳಲ್ಲಿ ಹೇಳುವುದು ಮತ್ತು ಬರೆಯುವುದು ಒಂದೇ ವಿಚಾರ ಇಂದು ಕೃಷಿ ಬಡವಾಗುತ್ತಯಿದೆ. ಯುವಕರು ನಗರದ ಹಾದಿ ಹಿಡಿಯುತ್ತಿದ್ದಾರೆ. ... ಇದೇ ರೀತಿಯ ಹತ್ತು ಹಲವು ವಿಚಾರಗಳನ್ನು ಹೇಳುತ್ತಲೇ ಇರುವು ನಾವು ಯಾಕೆ ಈ ವಿಷಯಗಳಿಂದ ಹೊರಬಂದು ಇಲ್ಲಿರುವ ಕೃಷಿಕರಿಗೆ ಜೀವ ತುಂಬುವ ಮತ್ತು ಪ್ರೋತ್ಸಾಹ ಕೊಡುವ ಕೆಲಸ ಮಾಡಬಾರದು. ಆಗ ನಗರದ ಕೆಲಸದಿಂದ ಬೇಸತ್ತ ಒಂದಷ್ಟು ಯವಕರಾದರೂ ಹಳ್ಳಿಗೆ ಬರಬಹುದಲ್ವಾ ಅಂತ ಯೋಚನೆ ಮಾಡುತ್ತಿರಬೇಕಾದರೆ ಮೊನ್ನೆ ಅಂತಹುದ್ದೇ ಸಂಗತಿಯೊಂದು ನಡೆಯಿತು,.

ಅದು ವಿದೇಶದ ಕೃಷಿನೊಬ್ಬ ನಗರಕ್ಕೆ ಆಗಮಿಸಿ ಪರ್ಯಾಯ ಕೃಷಿಯತ್ತ ವಿವರ ನೀಡುತ್ತಿದ್ದ. ಅದಕ್ಕಾಗಿ ಭಾಷೆಯ ತರ್ಜುಮೆಯಯನ್ನೂ ವ್ಯವಸ್ಥೆ ಮಾಡಲಾಗಿತ್ತು. ಒಂದಷ್ಡು ಉತ್ಸಾಹಿ ಕೃಷಿಕರು ಬಂದಿದ್ದರು. ಅವರಲ್ಲಿ ತಲೆ ಹಣ್ಣಾದವರೇ ಜಾಸ್ತಿ ಅಂತ ನಾವು ಒಳಗೊಳಗೇ ಹೇಳುವ ಬದಲು ಅವರೆರೆಲ್ಲರೂ ಉತ್ಸಾಹೀ ಯುವಕರೇ ಅಂತ ಕರೆದು ಬಿಡೋಣ . ಆದರೆ ನಮ್ಮ ದುರಾದೃಷ್ಠ ಎಂಬಂತೆ ಈ ಕಾರ್ಯಕ್ರಮಕ್ಕೆ ನಿರೀಕ್ಷಿತ ಮಟ್ಟದಲ್ಲಿ ಪ್ರಚಾರವೇ ಸಿಕ್ಕಿಲ್ಲ. ನಿಜವಾಗಲೂ ಇಂತಹ ಕಾರ್ಯಕ್ರಮಕ್ಕೆ ಪ್ರಚಾರ ಅವಶ್ಯಕತೆಯಿದೆ. ಅಲ್ಲಿ ವಿದೇಶಿ ಕೃಷಿಕನಿಗೆ ಅಲ್ಲ. ಅವನ ವಿಚಾರಕ್ಕೆ ಪ್ರಚಾರ ಬೇಕಿತ್ತು. ಹೇಗೆ ಅಲ್ಲಿನ ಕೃಷಿಕರು ಕಾಫಿ ಬೆಳೆಯಲ್ಲಿ ಸೋತು ಹೋಗಿದ್ದರೂ ಅವರು ಅದನ್ನು ಸರಿದೂಗಿಸಿ ಕೃಷಿಯಲ್ಲಿ ಬೆಳೆದು ಬಂದರು ಎಂಬುದು ಮುಖ್ಯವಾಗುತ್ತದೆ. ಆದರೆ ಅಂತಹ ಕಾರ್ಯಕ್ರಮದ ಒಂದು ತುಣುಕು ಕೂಡಾ ಲೀಡ್ ಆಗಲೇ ಇಲ್ಲ. ನಮ್ಮಲ್ಲೊಂದು ಪೂರ್ವಾಗ್ರಹವಿದೆ. ನಮಗೂ ಆತನಲ್ಲಿ ಆಗೋಲ್ಲ , ಆತನಿಗೂ ನಮ್ಮಲ್ಲಿ ಆಗೋಲ್ಲ ಎಂದರೆ ವಿಚಾರಗಳಿಗೆ ಬ್ರೇಕ್ ಹಾಕುವುದರ ಪರಿಣಾಮವಾಗಿ ಒಂದಷ್ಟು ಉತ್ಸಾಹಿತರಿಗೆ ವಿಚಾರವೇ ತಲಪುವುದಿಲ್ಲ. ಹಾಗಾಗಿ ಕೃಷಿ ಸಂಬಂಧಿ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಚಾರ ಬೇಕು. ಏಕೆಂದರೆ ಯುವಕರು ಕೃಷಿಯತ್ತ ಬರುತ್ತಿಲ್ಲ ಎನ್ನುವ ನಾವು , ಕೃಷಿ ಬೇಕು ಎನ್ನುವ ನಾವು ಅದಕ್ಕೆ ಸಂಬಂಧಿತ ಒಳ್ಳೆಯ ಕಾರ್ಯಕ್ರಮ , ಅಲ್ಲಿರುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲದಿದ್ದರೆ ಹೇಗೆ..? ಅದು ಮಾತ್ರವಲ್ಲ ಇಂದು ಕೃಷಿಯಲ್ಲಿ ಹೊಸ ಆವಿಷ್ಕಾರಗಳು ಮತ್ತು ಬದಲಾವಣೆ ಬೇಕು. ತಂತ್ರಜ್ಞಾನಗಳು ಬೇಕು. ಹಾಗಿದ್ದರೆ ಒಂದಷ್ಡು ಹುಡುಗರು ಇಲ್ಲಿ ಉಳಿಯ ಬಲ್ಲರು. ಅದಲ್ಲದೇ ಹೋದರೆ ಅಜ್ಜ ನೆಟ್ಟ ಆಲದ ಮರವಾದರೆ ಸುತ್ತು ಬಂದು ಸುಸ್ತಾಗಿ ದೂರ ಹೋಗುವುದು ಖಂಡಿತಾ. ಆದ ಕಾರಣ ಇಂತಹ ಹೊಸ ಆವಿಷ್ಕಾರಗಳು , ಬದಲಾವಣೆಗೆಳು, ಚಿಂತನೆಗೆಳು ಜನಸಾಮಾನ್ಯರಿಗೂ ತಲುಪಬೆಕಾಗದ್ದು ಅಗತ್ಯವಾಗಿದೆ. ಏನೇ ಆಗಲಿ ಆ ಕಾರ್ಯಕ್ರಮ ಸಂಘಟನೆ ಚೆನ್ನಾಘಿತ್ತು. ಒಳ್ಳೆಯ ಕಾರ್ಯಕ್ರವೂ ಆಗಿತ್ತು.

ಅದೇ ಕೇರಳದಲ್ಲಿ ಈ ಸುದ್ದಿ ಎಲ್ಲಾ ಮಾದ್ಯಮಗಳಲ್ಲಿ ಕವರ್ ಸ್ಟೋರಿಯಾಗಿ ಬಂದಿತ್ತು ಅಂತ ನಿನ್ನೆ ಮಾತನಾಡುತ್ತಿದ್ದ ಮಿತ್ರರೊಬ್ಬರು ಹೇಳಿದರು.........

Monday, May 25, 2009

ಇವರೆಲ್ಲಾ ಎಲ್ಲೋಗ್ತಾರೆ..??

ಇಂದು ಪ್ರಸ್ ಕ್ಲಬ್‌ನಲ್ಲಿ ಕುಳಿತು ಹರಟುತ್ತಿರುವಾಗ ನಮ್ಮ ಮಧ್ಯೆ ಪ್ರಶ್ನೆಯೊಂದು ಬಂತು.ಇದೊಂದು ಬಾಲಿಶ ಅಂತ ಅನ್ನಿಸಬಹುದು ಆದರೆ ಅದರ ಆಳ ಗಂಭೀರವಾಗಿ ಯೋಚಿಸಬೇಕಾದದ್ದು ಅಂತ ನನಗನ್ನಿಸತು. ಮಿತ್ರರೂ ಅದನ್ನೇ ಮೆಲುಕು ಹಾಕುತ್ತಿದ್ದರು.

ಮೊನ್ನೆ sslc ಫಲಿತಾಂಶ ಬಂತು.ಅದೂ ಉತ್ತಮ ಫಲಿತಾಂಶವಾಗಿತ್ತು.ಎಲ್ಲರೂ ನಿರೀಕ್ಷಿಸುವುದು ನನಗೆ "ಫಸ್ಟ್ ಕ್ಲಾಸ್" ಬರಲಿ ಅಂತನೇ. ಅದಕ್ಕಾಗಿ ದೇವರಿಗೆ ಹರಕೆ ಹೊರುವವರೂ ಇದ್ದಾರೆ ಬಿಡಿ. ಈಗಿರುವುದು ವಿಷಯ ಅದಲ್ಲ. ಹಾಗೆ ಹರಿಕೆ ಹೊತ್ತು.. ಏನೆಲ್ಲ್ಲಾ ಪರದಾಡಿ ಪಾಸಾಗ್ತಾರಲ್ಲ. ಅಷ್ಟು ಸಾಕು.

ಆದರೆ ಈಗ ನಮ್ಮ ಯೋಚನೆ ಅದಲ್ಲ. ಈ ಬಾರಿ ಏನಿಲ್ಲವೆಂದರ 1.5 ಲಕ್ಷ ವಿದ್ಯಾರ್ಥಿಗಳ SSLC ಪಾಸಾಗಿ ಪಿಯುಸಿ ಶಿಕ್ಷಣದತ್ತ ಮುಖ ಮಾಡಿದ್ದಾರೆ, ಇಂದು ರಾಜ್ಯದಲಿ ಪ್ರೌಢ ಶಿಕ್ಷಣ ಸಂಸ್ಥೆಗಳಿದ್ದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳಿಲ್ಲ. SSLC ಪಾಸಾದ ವಿದ್ಯಾರ್ಥಿಗಳಿಗೆಲ್ಲಾ ಪಿಯಿಸಿಯಲ್ಲಿ ಸೀಟು ಸಿಗುತ್ತಾ..? ಸಿಗದೇ ಇರುವವರೆಲ್ಲಾ ಏನಾಗುತ್ತಾರೆ..? ಅಂತಹದ್ದೊಂದು ಪ್ರಶ್ನೆಯ ಹಿಂದೆ ಹೋದಾಗ ಗಂಭೀರವಾದ ಉತ್ತರಗಳು ಸಿಗುತ್ತವೆ..

ಒಂದು ತಾಲೂಕನ್ನು ಮಾದರಿಯಾಗಿಸಿ ಈ ಅವಲೋಕನವನ್ನು ಮಾಡಿದಾಗ ಅಲ್ಲಿ ಸುಮಾರು 20 ಸಾವಿರ ವಿದ್ಯಾರ್ಥಿಗಳು SSLC ಬರೆದಿದ್ದಾರೆ. ಅದರಲ್ಲಿ ಸುಮಾರು 15 ಸಾವಿರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಈ ಪಾಸಾದ ವಿದ್ಯಾರ್ಥಿಗಳೆಲ್ಲಾ ಕಾಲೇಜನ್ನ ಅರಸುತ್ತಾ ಹೋಗುತ್ತಾರೆ. ತಾಲೂಕಿನ ಒಂದಷ್ಟು ಕಾಲೇಜುಗಳಿಂದ ಅರ್ಜಿ ತರುತ್ತಾರೆ. ಆ ತಾಲೂಕಿನಲ್ಲಿ ಇರುವುದು 8 ಕಾಲೇಜು. ಅದರಲ್ಲಿ ಈ 15 ಸಾವಿರ ಮಂದಿಗೆ ಅವಕಾಶ ಇರುವುದಿಲ್ಲ. ಏನಿಲ್ಲವೆಂದರೂ 4 ರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರಾ ಅವಕಾಶ. ಎಲ್ಲಾ ಕಾಲೇಜುಗಳೂ ಅತ್ಯಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಮೊದಲು ತೆಗೆದುಕೊಳ್ಳುತ್ತದೆ. ಅಂದರೆ "ಫಸ್ಟ್ ಕ್ಲಾಸ್" ಮಾತ್ರಾ. ಆಗಲೇ ತರಗತಿಯ ಶೇಕಡಾ 75 ಭಾಗ ಫುಲ್.. ಸರಕಾರಿ ಕಾಲೇಜುಗಳು ಮಾತ್ರಾ ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಹೆಚ್ಚಿನ ಅಂಕ ಪಡೆದವರನು ಸೇರಿಸಿಕೊಳ್ಳುತ್ತದೆ. ಹಾಗಾದರೆ ತೃತೀಯ ಶ್ರೇಣಿಯಲ್ಲಿ ಪಾಸದ ಮತ್ತು ಜಸ್ಟ್ ಪಾಸಾದ ವಿದ್ಯಾರ್ಥಿಗಳಿಗೆ ಸೀಟು ಎಲ್ಲಿ ಸಿಗುತ್ತದೆ..? ಅವರ ಭವಿಷ್ಯ ಏನಾಗುತ್ತದೆ. ಯಾಕೆಂದರೆ ಇಂದು ಸೆಕೆಂಡ್ ಕ್ಲಾಸ್ ಮತ್ತು ಅದಕ್ಕಿಂತ ಕಡಿಮೆ ಇರುವ ಕೆಲವರು ಐಟಿ‌ಐ ಯತ್ತ ಮುಖ ಮಾಡಿದರೆ ಅಲ್ಲೂ ಭರ್ತಿಯಾಗಿರುತ್ತದೆ. ಹಾಗಿದ್ದರೆ ಅಂತಹ ವಿದ್ಯಾರ್ಥಿಗಳ ಪಾಡು ಏನು?. ಅವರು ಏನಾಗುತ್ತಾರೆ?. ಪಿಯುಸಿ ಆದ ಬಳಿ ಅವಕಾಶಗಳು ಬೇಕಾದಷ್ಟು ಇದೆ. ಆದರೆ SSLC ಆದ ತಕ್ಷಣ ಅವಕಾಶಗಳು ಇಲ್ಲವೇ ಇಲ್ಲ ಅನ್ನಬಹುದು. ಹಾಗಾಗಿ ಅಂತಹ ವಿದ್ಯಾಥಿಗಳು ಇಂದು ದಿಕ್ಕು ಕಾಣದೆ ಕುಳಿತಿರುವ ಸ್ಥಿತಿ ಇದೆ. ಇದಕ್ಕೆ ಕಾರಣವೇನು?. ಅವರಲ್ಲಿರುವ ಪ್ರತಿಭೆಯ ಕೊರತೆಯೇ..? ಅಥವಾ ವ್ಯವಸ್ಥೆಯ ಲೋಪವೋ..? ಅಥವಾ ಅವರು ದಡ್ಡರೋ..? ಎಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ ಅಲ್ವೇ.......!!

ಅದಕ್ಕೇ ಹೇಳಿರ‍ಬೇಕು..

Servival Of fittest....!!!

Monday, May 11, 2009

ಬದುಕೆಂಬ ಪ್ರಯೋಗ ಶಾಲೆಯಲ್ಲಿ. . .




ಮುಂಜಾನೆಯ ಫ್ರೆಶ್ ಮೂಡ್‌ನಲ್ಲಿರುವಾಗ ಸಂದೇಶವೊಂದು ಬಂದಿತು. ಅಲ್ಲಿ ಒಂದೇ ಕುಟುಂಬದ ೩ ಜನ ಆತ್ಮಹತ್ಯೆ ಮಾಡಿದ್ದಾರಂತೆ. ಎಂಬ 2 ನಿಮಷದ ದೂರವಾಣಿ ಕರೆ. ಅದೆಲ್ಲೋ ಶುಭ ಕಾರ್ಯಕ್ಕೆ ಹೊರಟು ಸಿದ್ದವಾಗಿದ್ದಾಗ ಅದೇ ಮೂಡ್‌ನಲ್ಲಿ ಸ್ಥಳಕ್ಕೆ ಹೋದಾಗ ಘಟನೆ ಮನಕಲಕುವಂತಿತ್ತು. ಒಂದು ವರ್ಷದ ಮಗು ಕೂಡಾ ಸತ್ತು ಬಿದ್ದಿತ್ತು. ಮನೆಯಲ್ಲೆಲ್ಲಾ ಹೊರಳಾಡಿದ ದೃಶ್ಯ ಕಾಣುತ್ತಿತ್ತು.ಹಾಗೆ ಸಾಯುವುದಕ್ಕಿಂತ ಮುನ್ನ ಆತ ಫೋಟೋ ಇರಿಸಿ ಪೂಜೆ ಮಾಡಿದ್ದ ಎನ್ನುವುದಕ್ಕೂ ಅಲ್ಲಿ ಪುರಾವೆ ಇತ್ತು. ಆ ಬಳಿಕ ದಂಪತಿಗಳು ಹಸುಳೆ ಸಹಿತ ಸತ್ತು ಕೊಂಡಿದ್ದಾರೆ ಎಂಬುದು ಎಫ್‌ಐ‌ಆರ್. ಇಲ್ಲಿ ದಂಪತಿಗಳು ತೀರ್ಮಾನಿಸಿಯೇ ಈ ನಿರ್ಧಾರ ಕೈಗೊಂಡಿದ್ದಾರಾ ಅಥವಾ ಪತ್ನಿಗೆ ಬಲಾತ್ಕಾರವಾಗಿ ವಿಷ ಉಣಿಸಿದ್ದಾನಾ ಅನ್ನುವದಕ್ಕೂ ಮುನ್ನ ಆತನ ನಿರ್ಧಾರ ಮೊದಲೇ ಆಗಿತ್ತು.ಏಕೆಂದರೆ ಆತ ದಿನಕ್ಕೂ ಮುನ್ನ ಆಸುಪಾಸಿನ ಮನೆಗಳಿಗೆ ಭೇಟಿ ನೀಡಿದ್ದ , ಸಂಬಧಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ , ತನ್ನ ಸಹೋದರನ್ನು ಮರುದಿನ ಬೆಳಗ್ಗೆ ಬರಲೂ ಹೇಳಿದ್ದ. ಹಾಗಗಿ ಆತನದ್ದು ಪೂರ್ವಯೋಜಿತವೇ ಅಂತ ತಿಳಿಯುತ್ತದೆ. ಆದರೆ ಆ ಮುಗ್ದ ಮಗು..?. ಅದೃಷ್ಠವಶಾತ್ ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆ ಹೋದ ಕಾರಣ ಬದುಕುಳಿದಿದ್ದಾರೆ. ಇಂತಹ ಸಾವಿಗೆ ಕಾರಣ ಅನಾರೋಗ್ಯ..!!. ಅದು ಒಂದೇ ಕಾರಣ ಆಗಿರಲಾರದು ಬಹುಶ: ಆರ್ಥಿಕ ಮುಗ್ಗಟ್ಟು ಕೂಡಾ ಇರಬಹುದು ಅಂತ ಸ್ಥಳೀಯರು ಹೇಳಿಕೊಳ್ಳುತ್ತಾರೆ. ಆದರೆ ಆ 3 ಜೀವಗಳು ಇನ್ನಿಲ್ಲವಾಗಿದೆ. ಇದು ಒಂದು ಕುಟುಂಬದ ಆತ್ಮಹತ್ಯೆ ಪ್ರಕರಣ...

ಬದುಕು ಭಾರವಾದಾಗ ಹೀಗೂ ಅಂತ್ಯವಾಗಬಹುದು.... ಇಂತಹ ಬಹುತೇಕ ಪ್ರಕರಣಗಳಲ್ಲಿ ಅದೆಲ್ಲವೂ ಒಂದು ಕ್ಷಣದ ನಿರ್ಧಾರ. ಆದರೆ ಕೆಲವೊಮ್ಮೆ ಅದು ಪೂರ್ವಯೋಜಿತವೂ ಆಗಿರುತ್ತದೆ......... ಎಂದು ಅದೇ ಗುಂಗಿನಲ್ಲಿರುವಗ ಸುದ್ದಿಯೊಂದು ಬರುತ್ತಿತ್ತು. ಅದೆಲ್ಲೋ ನಗರದಲ್ಲಿ ದಯಾ ಮರಣಕ್ಕೆ ಅರ್ಜಿ ಹಾಕ್ತಿದ್ದಾರಂತೆ ಅದಕ್ಕಾಗಿ ಕೋರ್ಟ್‌ಗೂ ಹೋಗ್ತಾರಂತೆ. ಇದೂ ಒಂದರ್ಥದಲ್ಲಿ ಆತ್ಮಹತ್ಯೆ. ಇಲ್ಲೂ ಒಂದು ಕಾರಣವಿದೆ. “ಬದುಕು ಬೇಡ”ವೆನಿಸಿದೆ. ಕಾರಣ ವಯಸ್ಸಾಗಿದೆ..... ಯಾರಿಗೂ ಹೊರೆಯಾಗಬರದು ಎನ್ನುವುದು ಇವರ ನಿರ್ಧಾರ.. ಕೆಲ ಸಮಯದ ಹಿಂದೆ ಮತ್ತೊಂದು ಸುದ್ದಿಯಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ “ನನಗೂ ಸಾವು ಬೇಕು” ಅಂದಿದ್ದ ಆದರೆ ಆತನಿಗೂ ಇಚ್ಚಿಸಿದ ಸಾವುಸಿಕ್ಕಿಲ್ಲ.

ಈ ಜೀವ ಸಾವನ್ನು ಏಕೆ ಇಚ್ಚಿಸುತ್ತದೆ...?. “ಆತ್ಮ” ಏಕೆ “ಹತ್ಯೆ” ಮಾಡಿಕೊಳ್ಳಬೇಕು ಅಂತ ಯೋಚಿಸುತ್ತೆ. ಒಂದೋ ಸಮಾಜಕ್ಕೆ ಹೆದರಿ..... ಜೀವನಕ್ಕೆ ಹೆದರಿ.... ಸಮಸ್ಯೆಗೆ ಸೋತು..... ಇವೆಷ್ಟೇ ಕಾರಣ ಮೇಲ್ನೋಟಕ್ಕೆ ಕಾಣುತ್ತದೆ. ಇದು ನಾಳೆ ಯಾರ ಬದುಕಿನಲಿ ಬರೋದಿಲ್ಲ ಅನ್ನೋ ಗ್ಯಾರಂಟಿ ಏನು..?.ಯಾಕೆಂದ್ರೆ ಇಂದು ಅತ್ಯಂತ ಸಂತೋಷದಿಂದ ಸಮಾತನಾಡಿದ ವ್ಯಕ್ತಿ, ಧೈರ್ಯದಿಂದಿದ್ದ ವ್ಯಕ್ತಿ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಬದುಕಿಗೆ ಅಂತ್ಯ ಹಾಡುತ್ತಾನೆ. ಅಂತಹ ಅದೆಷ್ಟೋ ಘಟನೆಗಳು ಇಲ್ಲಿ ನಡೆದಿದೆ.ಅದಕ್ಕೆಲ್ಲಾ ಕಾರಣ ಮೇಲಿನ ೩ ರಲ್ಲಿ ಯಾವುದಾರೊಂದು..!!

ಬದುಕೆನ್ನುವುದು ಒಂದು ಪ್ರಯೋಗ ಶಾಲೆಯಂತೆ ಎಂದು ಹೇಳುತ್ತಿದ್ದರು ಹಿರಿಯರು.ಇಲ್ಲಿ ಎಲ್ಲ ಪ್ರಯೋಗಗಳು ನಡೆಯಬೇಕು. ಅಂತಹ ಪ್ರಯೋಗಗಳು ನಡೆಯುತ್ತಲೇ ಇರುವಾಗ ಕೆಲವೊಮ್ಮೆ “ನಮ್ಮ ಸತ್ಯ”ಗಳೂ ನಮಗೆ ಮುಳುವಾಗಬಹುದು , ವಿಶಾಲ, ತೆರೆದ ಹೃದಯವೂ ನಮ್ಮ ಹಿನ್ನಡೆಗೆ ಕಾರಣವಾಗಬಹುದು.. ಒಂದರ್ಥದಲ್ಲಿ ಶಸ್ತ್ರ ರಹಿತ ಯುದ್ದದಂತೆ..... ಆದರೆ ಈ ಪ್ರಯೋಗ ಶಾಲೆಯಲ್ಲಿ ನಡೆಯುವ ಒಂದೊಂದು ಪ್ರಯೋಗಗಳೂ ಹೊಸತೊಂದು “ರಿಸಲ್ಟ್ “ ಕೊಡುತ್ತವೆ. ಹಾಗಗಿ ಆ ರಿಸಲ್ಟ್‌ಗಳ ಆಧಾರದಲ್ಲಿ ಬದುಕನ್ನು ರೂಪಿಸುತ್ತಾ ಬೆಳೆಯಬೇಕು ಅಂತ ಎಲ್ಲೋ ಓದಿದ ಮತ್ತು ಇನ್ನೂ ಕೆಲವರ ಅನುವಭದ ಮಾತು. ಆದರೆ ಇಂದು ಈ ಪ್ರಯೋಗ ಶಾಲೆಯಲ್ಲಿ ಕ್ಷಣಿಕ ಸುಖದ ಬಗ್ಗೆ ಯೋಚಿಸುವ ಜನ ಹೆಚ್ಚಿದ್ದಾರೆ. ಹಾಗಾಗಿ ಯಾವುದೇ ಪ್ರಯೋಗಗಳಾದರೂ ಅದರ ರಿಸಲ್ಟ್ ಕೂಡಾ ಕ್ಷಣದಲ್ಲೇ ಸಿಗಬೇಕು ಮತ್ತು ಹೇಳಬೇಕು. ಮತ್ತು ಆ ರಿಸಲ್ಟ್ ಗೆಲುವೇ ಆಗಬೇಕು ಎನ್ನುವ ನಿರ್ಧಾರ ಮಾನಸಿಕವಾಗಿರುತ್ತದೆ. ಕೆಲವೊಮ್ಮೆ ಅಂತಹ ಯೋಚನೆಗಳೇ ನಮ್ಮನ್ನು ದಾರಿ ತಪ್ಪಿಸಿ ಬಿಡುತ್ತವೆ. ಆಗ ಯೋಚನೆಯ ದಾರಿಯೂ ತಪ್ಪಿಬಿಡುತ್ತದೆ. ಹಾಗಗಿ ಇಂದು ಪ್ರಯೋಗ ಶಾಲೆಯಲ್ಲಿ ಯಾವಗಲೂ ಗೆಲುವಾಗುತ್ತದೆ ಎನ್ನವ ಭ್ರಮೆಯಲ್ಲಿರದೆ ಸೋಲೂ ಇರುತ್ತದೆ ಎನ್ನುವ ವಾಸ್ತವವನ್ನು ಅರಿತು ಆ ಸೋಲೇ “ಸವಾಲಾದಾಗ” ಮುಂದೆ ಗೆಲುವು ಇದ್ದೇ ಇರುತ್ತದೆ ಎನ್ನುವ ಮನಸ್ಥಿತಿ ಬರಬೇಕು......

ಹಾಗಗಿ ಆತ್ಮಹತ್ಯೆ.. ಮತ್ತು ಸಾವಿಗಾಗಿ ಅರ್ಜಿ ಹಾಕುವುದು ಬಿಟ್ಟು ಸಾವು ಬರುವವರೆಗೆ ಸಾಧಿಸುವುದು ಒಳ್ಳೆಯದಲ್ವೇ.....?.

Thursday, May 7, 2009

ಸತ್ಯವು ಕಹಿಯಂತೆ....

ನಾವು ಅಂದುಕೊಂಡಂತೆ ಜಗತ್ತು ಇರುವುದಿಲ್ಲ. ಹಾಗೆಂದು ಯೋಚಿಸುವುದು ಕೂಡಾ ತಪ್ಪು ಅಂತ ನನ್ನ ಮಿತ್ರನೊಬ್ಬ ಹೇಳುತ್ತಾ ಇರುತ್ತಿದ್ದ . ಅದು ಹೌದು ಕೂಡಾ. ಅಂತಹ ಅದೆಷ್ಟೂ ಘಟನೆಗಳು ನಮ್ಮ ಮುಂದೆಯೇ ನಡೆಯುತ್ತದೆ. ಆದರೂ ನಾವು ಆ ಬಗ್ಗೆ ಯೋಚಿಸುವುದಿಲ್ಲ . ಆದರೆ ಅದು ನಮಗೇ ಅನುಭವಾದಾಗ ಮಾತ್ರಾ ಅರಿವಾಗುತ್ತದೆ.

ಇತ್ತೀಚೆಗೆ ಒಬ್ಬ ವೈದ್ಯರೊಬ್ಬರು ನಮ್ಮನ್ನು ಹುಡುಕಿಕೊಂಡು ಬಂದಿದ್ದರು...ಬಳಿಕ ಅವರು ವಿವರಿಸಿದ ಕತೆ ಹೀಗಿದೆ. ಅದಕ್ಕೂ ಮೊದಲು ಇದರ ಸಾರಾಂಶ ಹೀಗಿದೆ. ಸತ್ಯ ಹೇಳಬಾರದು.. ಸತ್ಯ ಹೇಳಿದರೆ ಅದನು ಜಗತ್ತು ಮತ್ತು ವ್ಯಕ್ತಿಗಳು ಒಪ್ಪುವುದಿಲ್ಲ.. ಸುಳ್ಳೇ ಹೇಳಬೇಕು.. ಎನ್ನುವುದು ಇದರ ಮೊದಲ ಪ್ಯಾರಾ...

ಅವರು ಒಂದು ಪುಸ್ತಕ ಬರೆದಿದ್ದರು. ಅದರಲಿ ಕೆಲ ವಿಚಾರಗಳು ನೇರವಾಗಿದ್ದವು ಮತ್ತು ವಾಸ್ತವವನ್ನು ಬಿಂಬಿಸುತ್ತಿದ್ದವು. ಇದು ಬಿಡುಗಡೆಯಾದ್ದೇ ತಡ. ಹಿರಿಯರಿಂದ ಬಂತು ಕಿರಿ ಕಿರಿ.. ಹಾಗಾಗಿ ಕ್ಷಮೆಯನ್ನು ಕೇಳಿದರು.. ನಂತರ ಯೋಚಿಸಿದ ಅವರು ಮಾತನಾಡಿದ್ದು ಹೀಗೆ.. ಈ ಸಮಾಜ ಹೀಗೂ ಇರುತ್ತೆ.. ಆ ಪುಸ್ತಕದಲ್ಲಿ ನಾನು ಸತ್ಯವನ್ನು ಪ್ರತಿಪಾದಿಸಿದೆ.. ಜಗತ್ತು ಸತ್ಯವನ್ನು ಹೇಳಬೇಕು ಅಂತ ಹೇಳುತ್ತೆ.... ಹಾಗೆ ಒಂದು ವೇಳೆ ಸತ್ಯವನ್ನೇ ಬರೆದರೆ ಇಡೀ ಜಗತ್ತು ಒಂದಾಗಿ ಕ್ಷಮೆ ಕೇಳಬೇಕು ಅಂತಲೂ ಒತ್ತಾಯಿಸುತ್ತದೆ ಎನ್ನುತ್ತಾ ಮಾತನ್ನು ಮುಂದುವರಿಸುತ್ತಾರೆ...ಇದು ಯುವ ಸಾಹಿತಿಯೊಬ್ಬರ ಮಾತು ಕೂಡಾ ಹೌದು.. ಇದೆಂಥಾ ವಿಪರ್ಯಾಸ ಎಂದು ಅವರು ಹಲುಬುತ್ತಿದ್ದರು...

ಆದರೆ ನಿಜಕ್ಕೂ ಇಂದು ಜಗತ್ತು ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಮತ್ತು ಅದು ಕಹಿಯೂ ಆಗುತ್ತೆ.. ಅದು ಪಥ್ಯವೂ ಆಗುವುದಿಲ್ಲ.. ನಾನು ಕೂಡಾ ವೈದ್ಯರ ಆ ಮಾತನ್ನು ನನ್ನ ಇದುವರೆಗಿನ ಬದುಕಿನ ಅನಭವದ ಆಧಾರದಲ್ಲಿ ಕೊನೆಗೆ ಒಪ್ಪಿಕೊಂಡೆ... ಇಲ್ಲಿ ಅನುಭವ ಹಾಗೂ ಮುಕ್ತವಾದ ಸತ್ಯ ಮುಖ್ಯವಾಗುವುದಿಲ್ಲ... ಮುಕ್ತವಾದ ಮನ .. ಬರಹ ಮುಖ್ಯವಾಗುವುದಿಲ್ಲ... ಇಲ್ಲಿ ಮುಖ್ಯವಾಗುವುದು ಮನೆ.. ಹಣ... ಅಂತಸ್ತು... ಅಧಿಕಾರ... ಮತ್ತು.. ದರ್ಪ.. ಹಾಗಾಗಿ ವೈದ್ಯರು ಹೇಳುತ್ತಿದ್ದರು ಇಲ್ಲಿ ಸಜ್ಜನಿಕೆಗೆ.. ನಿರ್ಮಲ ಮನಸ್ಸಿಗೆ , ಬೆಳೆಯುವ ಮನಸ್ಸುಗಳಿಗೆ ಅವಕಾಶವಿಲ್ಲ ಅಂತ.ಆದರೂ ಮತ್ತೆ ಮಾತನಾಡುತ್ತಾ....... ನಾವು ಸತ್ಯದ ಪ್ರತಿಪಾದನೆಯಿಂದ ಬರುವ ಮಾತುಗಳನ್ನು ಕೇಳಿ ಸುಳ್ಳನ್ನು ಪ್ರತಿಪಾದನೆ ತೊಡಗುವುದರಿಂದ ಯಾವುದೇ ಪ್ರಯೋಜನವಿಲ್ಲ.... ನಾವು ಬೆಳೆಯುತ್ತಾ ಟೀಕಿಸುವವರಿಗೆ ಮತ್ತು ನಮ್ಮನ್ನು ಇಷ್ಟಪಡದವರಿಗೆ ಅಸೂಯೆಯಾಗುವಂತೆ ಬರೆಯಬೇಕು ಮತ್ತು ಬದುಕಬೇಕು..... ಅಂತ ಹೇಳಿದ್ದು ನಿಜಕ್ಕೂ ಹೊಸತೊಂದು ತಿರುವು ಕಂಡಿತು.. ಒಂದು ಸುದ್ದಿಯೂ ಆಯಿತು...

Sunday, May 3, 2009

ಹೃದಯ ತೆರೆದಾಗ. . . .




ಅನೇಕ ದಿನಗಳಿಂದ ನಾಳೆಯ ಬಗ್ಗೆ ಮನಸ್ಸಿನೊಳಗೇ ಸುತ್ತಾಡುತ್ತಿದ್ದ ಹಲವು ಯೋಚನೆಗಳು , ಯೋಜನೆಗಳನ್ನು, ಕೇವಲ 15 ನಿಮಿಷದಲ್ಲಿ ನಿರ್ಭಯವಾಗಿ ,ನಿಸ್ಸಂಕೋಚವಾಗಿ ,ಯಾವುದೇ ಮುಜುಗರವಿಲ್ಲದೇ ಹೇಳಿಕೊಂಡಾಗ ಮನಸೆಷ್ಟು ಹಗುರವಾಗಿ ಬಿಡುತ್ತದೆ...!! ಆ ಬಳಿಕ ಮನಸ್ಸಿಗೆ ಏನೋ ಉಲ್ಲಾಸ .... ಅದರೆ ಅದು ಕೇವಲ 15 ನಿಮಿಷದಲ್ಲಿ ಮುಗಿದು ಹೋಗುವಂತದ್ದಲ್ಲ.. ಅದರ ಪ್ರೋಸೆಸ್ ದೀರ್ಘ ಕಾಲ... ಏಕೆಂದರೆ ಈ ಬದುಕು 3 ದಿನವಾದರೂ ಅದರೊಂದಿಗಿರುವ ಸಮಯ ಹೆಚ್ಚಿದೆಯಲ್ಲಾ.. ಆದರೂ ಮತ್ತೆ ಮನಸ್ಸಿನೊಳಗೆ ಒಮ್ಮೆ ಕಾಡಿತ್ತು.. ಬದುಕಿನ ಪುಟಗಳನ್ನು ತೆರೆದಿಡಬೇಕಿತ್ತಾ..? ಮನಸ್ಸು ಮತ್ತೆ ಹೇಳಿತ್ತು... ಆ ಪುಟಗಳು ಮುಂದಿನ ದಾರಿಗೆ ರಹದಾರಿಯಾಗಬಲ್ಲದು... ಹಾಗಾಗಿ
ಅದು ಅನಿವಾರ್ಯ ಮತ್ತು ಆ ಪುಟಗಳು ಮುಂದಿನ ದಾರಿಯನ್ನು ನಿರ್ಧರಿಸಬಲ್ಲುದು , ನಾಳೆ ಮನಸ್ಸು ಇನ್ನಷ್ಟು ಹಗುರವಾಗಲು ಕಾರಣವಾಗಬಹುದು ಎಂಬ ಯೋಚನೆ ನಂದು. ಹಾಗಾಗಿ ಬದುಕಿನ ಹಿಂದಿನ ಪುಟಗಳು ಎಳೆ ಎಳೆಯಾಗಿ ತೆರೆಯುತ್ತಾ ಸಾಗಿದಂತೆ ಮನಸ್ಸಿಗೆ ಖುಶಿಯಾಯಿತು. ಆ ಪುಟಗಳು ಮಾಸಿರಲಿಲ್ಲ.. ಒಂದೊಂದು ಪುಟವೂ ನನಗೆ ಮತ್ತೆ ಉತ್ಸಾಹವನ್ನು ನೀಡುವಂತಿತ್ತು.. ಮತ್ತೆ ಬಾಲ್ಯವನ್ನು ನೆನಪಿಸಿ, ಈಗಿನ ವರೆಗಿನ ಬದುಕನ್ನು ನೆನಪಿಸಿ ಬಿಟ್ಟಿತು. ಹಾಗಾಗಿ ಮನಸ್ಸು ಕೂಡಾ ಹಗುರವಾಗಿತ್ತು.

ಈ ಹೃದಯವನ್ನು ಮತ್ತು ಅದರೊಳಗಿನ ಪುಟವನ್ನು ತೆರೆಯಲೂ ಕಾರಣವಿತ್ತು..ಕಾರಣವಿಲ್ಲದೆ ಅದೆಲ್ಲವನ್ನೂ ನೆನಪಿಸಿಕೊಂಡಿರಲಿಲ್ಲ. ಬದುಕಿನ ಒಂದು ಹಂತದ ಗಡಿಯನ್ನು ದಾಟಿ ಇನ್ನಷ್ಟು "ಜವಾವ್ದಾರಿ"ಯ ಕಾಲ ಘಟ್ಟಕ್ಕೆ ಬಂದಾಗ ಹಿಂದಿನ ದಾರಿ ಮತ್ತು ಮುಂದಿನ ಗುರಿ ಮತ್ತು ಅದೆರೆಡೆಗಿನ ದಾರಿಯನ್ನು ಯೋಚಿಸಬೇಕು ಎಂಬ ಕಾರಣಕ್ಕೆ ಬದುಕಿನ ಪುಟವನ್ನು ತೆರೆಯಬೇಕಾಯಿತು.

ಆದರೆ ಆ ಪುಟಗಳಲ್ಲಿರುವ ವಿಚಾರವು ಮತ್ತು ಹೃದಯದ ಒಳಗಿನ ಸಂಗತಿಯು "ಸ್ವಗತ"ವಾಗಿಲ್ಲ... ಕೇಳುವ ಹತ್ತು ಮನಸ್ಸಿತ್ತು..... ಹಾಗಾಗಿ "ನನಗಂತೂ ಖುಷಿ"ಯಾಗಿತ್ತು.. ಮನಸ್ಸು ಹಗುರವಾಗಿತ್ತು.... ನನ್ನ ದೈನಂದಿನ ಕೆಲಸಕ್ಕೆ ಇನ್ನಷ್ಟು ಹುರುಪು ಬಂದಿದೆ... ಏಕೆಂದರೆ ತೊಳಲಾಟವಿಲ್ಲ......

Monday, April 20, 2009

ಅಫಘಾತ ಮತ್ತು ಮಾನವೀಯತೆ. . .

ಇಂದು ಮನೆಯ ದಾರಿಯತ್ತ ಬರುತ್ತಿರಬೇಕಾದರೆ ಸಕತ್ತಲು ಆವರಿಸಿತ್ತು.ಒಂದೆಡೆ ವಾಹನಗಳು ಸಾಲು ನಿಂತಿದ್ದವು. ಅವುಗಳನ್ನು ದಾಟಿ ಮುಂದಕ್ಕೆ ಬಂದಾಗ ಅಲ್ಲೊಂದು ಬೈಕ್ ಮಗುಚಿ ಬಿದ್ದಿತ್ತು.. ಯುವಕನೊಬ್ಬ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ. ಆಚೀಚೆ ನೋಡಿದಾಗ ಅಲ್ಲಿ ಯಾರೊಬ್ಬರೂ ಸುಳಿದಾಡುವುದು ಕಂಡುಬಂದಿರಲಿಲ್ಲ.ಪಕ್ಕದಲ್ಲಿ ಇನ್ನೊಬ್ಬ ಗಾಯಗಳೊಂದಿಗೆ ಸುಮ್ಮನೆ ನಿಂತಿದ್ದ .ವಾಹನಗಳ ಸಾಲು ಹೆಚ್ಚಿತು. ಒಬ್ಬೊಬ್ಬರೇ ಬಂದಿಳಿದು ನೋಡಿದಾಗ ಒಬ್ಬ ಅಂದ ಇವನ ನನಗೆ ಗುರುತಿದೆ.. ತಕ್ಷಣ ಆ ಯುವಕನ ಮೇಲೆತ್ತುವ ಪ್ರಯತ್ನ ನಡೆಯಿತು.ಮುಖ ತುಂಬಾ ಗಾಯಗಳಾಗಿತ್ತು. ಮತ್ತೆ ಮತ್ತೆ ವಿಚಾರಿಸಿದಾಗ ಆತ ಅಮಲು ಸೇವಿಸಿ ವಾಹನ ಚಲಾಯಿಸುತ್ತಿದ್ದ ವಿಷಯ ತಿಳಿಯಿತು.. ಹಾಗಾಗಿ ಒಬೊಬ್ಬರೇ ಹೊರಟರು.ಇನ್ನೊಬ್ಬರು ವಾಹನ ಗೊತ್ತು ಪಡಿಸಿ ಆಸ್ಪತ್ರೆಗೆ ಕೊಂಡೊಯ್ಯಲು ಹೋದರು. ನಿಜವಾಗೂ ಅವರು ಹೋಗಬೇಕಾದ ದಾರಿ ಅದಾಗಿರಲಿಲ್ಲ. ಕುಡಿತದ ಅಮಲಿನಲಿ ಅವರು ಈ ದಾರಿಯಾಗಿ ಬಂದಿದ್ದರು.

ಈ ಘಟನೆಯ ನಂತರ ದಾರಿಯಲ್ಲಿ ಬರುವಾಗ ನೆನಪಾದ ಒಂದು ಘಟನೆ ..

ಒಂದು ಕಡೆ ದಂಪತಿಗಳು ಕಾರ್ಯಕ್ರಮವೊಂದಕ್ಕೆ ಹೊರಟಿದ್ದರು. ಅವರ ವಾಹನ ಹೆದ್ದಾರಿ ತಲಪಿ ಅಲ್ಲಿಂದ ಮುಂದೆ ಸಾಗುತ್ತಿತ್ತು. ಈ ರಕ್ಕಸ ಲಾರಿಗಳಿಗೆ ಜೀವಗಳ ಬೆಲೆಗೊತ್ತಿಲ್ಲ ಅದರ ಚಾಲಕರೂ ಹಾಗೆ ಯಾವಾಗಲೂ ಕುಡಿಯುತ್ತಲೇ ವಾಹನ ಚಲಾಯಿಸುವುದು ಎನ್ನುವ ರೂಢಿಯೂ ಇದೆ.ಇಲ್ಲಿ ಅದೇ ಆಯಿತು. ವಾಹನಕ್ಕೆ ಲಾರಿ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಇಬ್ಬರಿಗೂ ಗಾಯವಾಯಿತು.. ಹೆಂಡತಿ ವಾಹನದ ಅಡಿಯಲ್ಲಿ ಸಿಲುಕಿ ಚೀರಾಡುತ್ತಿದ್ದಾಳೆ.. ಗಂಡ ತೀವ್ರ ಗಾಯಗೊಂಡು ದೂರದಲ್ಲಿ ಬಿದ್ದಿದ್ದಾನೆ.. ಹೆಂಡತಿಯನ್ನು ರಕ್ಷಿಸಲಾಗದೆ ತೊಳಲಾಡುತ್ತಿದ್ದಾನೆ.. ಸಹಾಯಕ್ಕೆ ಕರೆದರೆ ಯಾರೊಬ್ಬರೂ ಬರುತ್ತಿಲ್ಲ.ಕಣ್ಣೆದುರೇ ಹೆಂಡತಿ ಸತ್ತು ಹೋದಳು..

ಇನ್ನೊಂದು ಘಟನೆ..

ಅವರು ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ರಾತ್ರಿ ತೆರಳಿದ್ದರು. ಒಂದೆಡೆ ವಾಹನದ ಚಾಲಕ ತೂಕಡಿಸಿದ ಕ್ಷಣಾರ್ಧದಲ್ಲಿ ವಾಹನ ಮರಕ್ಕೆ ಡಿಕ್ಕಿ ಹೊಡೆಯಿತು. ಅದರಲ್ಲಿದ್ದ ಒಂದಿಬ್ಬರಿಗೆ ತೀವ್ರ ಗಾಯವಾಯಿತು.ಅದು ರಾತ್ರಿ ವೇಳೆ ಬೇರೆ ಯಾವುದೇ ಒಂದು ವಾಹನ ನಿಲ್ಲಿಸಿಲ್ಲ. ವಾಹನದಲ್ಲಿದ್ದ ಸಣ್ಣ ಪುಟ್ಟ ಗಾಯಳುಗಳೂ ರಸ್ತೆಯಲ್ಲಿ ಸಾಗುತ್ತಿದ್ದ ವಾಹನ ನಿಲ್ಲಿಸಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುವುದಕ್ಕಾಗಿ ಹೆಣಗಾಡಿದರು.ಯಾವುದೊಂದು ವಾಹನವೂ ನಿಲ್ಲಿಸಿಲ್ಲ. ಹಾಗಾಗಿ ಸಕಾಲ ಚಿಕಿತ್ಸೆ ಕೊಡಿಸಲಾಗದೆ ಇಬ್ಬರು ಕಣ್ಣಮುಂದೆಯೇ ಸತ್ತು ಹೋದರು..

ಇವೆರಡು ಅಪಘಾತದ ಸ್ಯಾಂಪಲ್‌ಗಳು. ವಾಹನದಲ್ಲಿ ವೇಗವಾಗಿ ಹೋಗುವಾಗ ನಮಗೆ ಆನಂದವೋ ಆನಂದ .. ಆದರೆ ಅಲ್ಲೇನಾದರೂ ಆಕಸ್ಮಿಕ ನಡೆದರೆ ನಮ್ಮನ್ನು ನೋಡುವ ಜನರೇ ಇಲ್ಲ.ಎಲ್ಲಾದರೂ ನಮ್ಮ ಪರಿಚಿತರಿದ್ದರೆ ಬದುಕುಳಿಯ ಬಲ್ಲುದೋ ಏನೋ.. ಹಾಗಾಗಿ ಒಂದು ಅಪಘಾತದಲ್ಲಿ ಗಾಯಗೊಂಡವರಿದ್ದರೆ ಅವರಿಗೆ ಮಾನವೀಯ ನೆಲೆಯಲ್ಲಿ ನಾವು ಸಹಾಯ ಮಾಡಬೇಕು.. ನಾಳಿನ ನಮ್ಮ ಚಿಂತೆಯಲ್ಲಿ.. ಅದಕ್ಕೂ ಮುನ್ನ ಅಪಘಾತವಾಗದಂತೆ ಎಚ್ಚರ ವಹಿಸುವುದು ಸೂಕ್ತ ಅಲ್ವಾ..